ಶೈವ, ವೈಷ್ಣವ, ಜೈನ ಕ್ಷೇತ್ರ - ಅಡಗೂರು
*ಟಿ.ವಿ.ನಟರಾಜಪಂಡಿತ್
ಚಂದ್ರದ್ರೋಣ ಪರ್ವತ ಶ್ರೇಣಿಯಿಂದ ಸುತ್ತುವರಿದ ಅಡಗೂರು ಅರೆಮಲೆನಾಡಿನ ಪುಟ್ಟಗ್ರಾಮ. ಈ ಗ್ರಾಮದಲ್ಲಿ ವಿಶಾಲ ಕೆರೆಯ ಸಮೀಪದಲ್ಲಿ 12-13ನೇ ಶತಮಾನದ ಆದಿ ಭಾಗದಲ್ಲಿ ನಿರ್ಮಿಸಿದ ದೇವಾಲಯಗಳು ಮನಮೋಹಕವಾಗಿವೆ.
ಬಹುಧರ್ಮ ಸಮನ್ವಯ ಕ್ಷೇತ್ರವಾದ ಈ ಗ್ರಾಮದಲ್ಲಿ ಶ್ರೀ ಲಕ್ಷ್ಮೀನಾರಾಯಣ, ಶ್ರೀ ಕಲ್ಲೇಶ್ವರ ಹಾಗೂ ಶ್ರೀ ವರ್ಧಮಾನ ಬಸದಿಗಳಿವೆ. ಹಿಂದೆ ಇದು ಜಿನ ಕ್ಷೇತ್ರವಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿಯೂ ನಿಂತಿದೆ.
ಅಡಗೂರು ಗ್ರಾಮದ ಉತ್ತರ ಭಾಗದಲ್ಲಿ ಹೊಯ್ಸಳ ವಾಸ್ತು ವೈಭವದಿಂದ ಕೂಡಿದ ಶ್ರೀಲಕ್ಷ್ಮೀನಾರಾಯಣ ದೇವಾಲಯವಿದೆ. ಈ ದೇವಾಲಯ ಕೂಡ ಹೊಯ್ಸಳ ಶೈಲಿಯ ಇತರ ದೇವಾಲಯಗಂತೆ ನಕ್ಷತ್ರಾಕಾರದ ಜಗಲಿಯ ಮೇಲಿದೆ. ಮುಖಮಂಟಪ, ಸುಖನಾಶಿ, ಭುವನೇಶ್ವರಿ, ಗರ್ಭಗೃಹ, ಜಾಲಂದ್ರಗಳು ಇಲ್ಲಿವೆ. ಹೊರ ಬಿತ್ತಿಗಳಲ್ಲಿ ಸೂಕ್ಷ್ಮ ಕೆತ್ತನೆಗಳಿಲ್ಲ ಎನ್ನುವುದನ್ನು ಬಿಟ್ಟರೆ ಉಳಿದಂತೆ ಹೊಯ್ಸಳರ ಕಾಲದ ದೇವಾಲಯ ಎಂಬುದನ್ನು ಇದು
ಹೊರನೋಟದಿಂದಲೇ ಸಾಬೀತುಪಡಿಸುತ್ತದೆ. ಮೂರು ಗರ್ಭಗುಡಿ, ಮೂರು ಗೋಪುರ ಹೊಂದಿರುವ ಈ ದೇವಾಲಯ ತ್ರಿಕೂಟಾಚಲ. ದೇವಾಲಯ ಪೂರ್ವಾಭಿಮುಖವಾಗಿದ್ದು, 10-11ನೇ ಶತಮಾನದಲ್ಲೇ ಇದರ ನಿರ್ಮಾಣವಾಗಿದೆ ಎಂದು ತಜ್ಞರು ಊಹಿಸುತ್ತಾರೆ. ಶಾಸನಗಳಲ್ಲಿ ಇಲ್ಲಿನ ದೇವರಿಗೆ ವಡಗು ನಾರಾಯಣ ಎಂಬ ಉಲ್ಲೇಖವಿದೆ.
ಮಧ್ಯದ ಪ್ರಧಾನ ಗರ್ಭಗೃಹದಲ್ಲಿ ಶ್ರೀಲಕ್ಷ್ಮೀನಾರಾಯಣನ ಮನಮೋಹಕ ವಿಗ್ರಹವಿದೆ. ಎಡ ಮತ್ತು ಬಲ ಭಾಗದಲ್ಲಿರುವ ಗರ್ಭಗೃಹಗಳಲ್ಲಿ ಶ್ರೀ ವೇಣುಗೋಪಾಲ ಮತ್ತು ತಾಯಿ ಸರಸ್ವತಿಯ ವಿಗ್ರಹಗಳಿವೆ. ಈ ಶಿಲ್ಪಗಳಲ್ಲಿ ಹೊಯ್ಸಳ ವಾಸ್ತು ಶಿಲ್ಪದ ವೈಭವ ಎದ್ದು ಕಾಣುತ್ತದೆ.
ಇತಿಹಾಸಜ್ಞರು ಊಹಿಸುವ ರೀತ್ಯ ಕದಂಬ ವಂಶದ ಪತನಾ ನಂತರ ಚದುರಿದ ಕದಂಬ ವಂಶೀಯರು ಸಕಲೇಶಪುರದಲ್ಲಿ ಬಂದು ನೆಲೆಸಿದರು. ಇವರನ್ನು ಉತ್ತರ ಕದಂಬ ವಂಶೀಯರು ಎಂದು ಹೇಳಲಾಗುತ್ತದೆ. ಇವರು 10-11ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಿಸಿದ್ದಾರೆ. ತದ ನಂತರ 12-13ನೇ ಶತಮಾನದಲ್ಲಿ ಇದನ್ನು ಹೊಯ್ಸಳರು ಪುನರ್ನಿರ್ಮಾಣ ಮಾಡಿದ್ದಾರೆ.
ಊರಿನಲ್ಲಿ ಕಲ್ಲೇಶ್ವರ ಸ್ವಾಮಿಯ ದೇವಾಲಯವೂ ಇದೆ.
ಈ ದೇವಾಲಯಕ್ಕೆ ಸಮೀಪದಲ್ಲೇ ಇರುವ ಶ್ರೀವರ್ಧಮಾನ ಬಸದಿಯೂ ಸುಂದರವಾಗಿದೆ. ವೈಷ್ಣವ, ಶೈವ ಹಾಗೂ ಜೈನ ಸಂಪ್ರದಾಯದ ತವರಾಗಿ ಭಾವೈಕ್ಯತೆಯ ಬೀಡಾಗಿತ್ತು ಅಡಗೂರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ದೇವಾಲಯದ ಒಳಗೆ ವೃತ್ತಾಕಾರದ ಕಲ್ಲುಕಂಬಗಳಿವೆ. ಗರ್ಭಗೃಹದಲ್ಲಿ ಶ್ರೀವರ್ಧಮಾನರ ಸುಂದರ ಮೂರ್ತಿಯಿದೆ.
No comments:
Post a Comment